22
Nov
Posted by ನೀರ ತೆರೆ in ಲಹರಿ. Leave a Comment
ಎಲ್ಲರಂತೆ ನಾನು ಬ್ಲಾಗಿಸಬೇಕೆಂದು ಶುರು ಹಚ್ಚಿದ ಬ್ಲಾಗ್ ಬರಹದ ವಿಕ್ಷಣೆ ಸಾವಿರದ ಗಡಿ ದಾಟಿದೆ. ಅನಿಯಮಿತವಾಗಿ ಬರೆಯುವ ನಾನು, ಕೆಲಸದಲ್ಲಿ ಎಲ್ಲೋ ಕಳೆದು ಹೋಗುತ್ತಾ ಬರೆಯುವದನ್ನು ಮರೆತಂತೆ ಕಳೆದು ಹೋಗುತ್ತಾ ಬರೆಯದೆ ಇರುವುದಕ್ಕೆ ಏನನ್ನೋ ಕಳೆದುಕೊಂಡಂತೆ ಒದ್ದಾಡುತ್ತಿರುವ ದಿನದಲ್ಲಿದ್ದೇನೆ. ನನ್ನಲ್ಲಿನ ಕನಸುಗಳು ದಿನಾ ಹೀಗೆ ಮತ್ತೆ ಬರೆಯೆಂದು ಅಥವಾ ಎಲ್ಲಾದರೂ ಪ್ರಕಟಿಸುವ ಕುರಿತು ಯೋಚಿಸುತ್ತವೆ ಆದರೆ ಇದೆಲ್ಲಾ ಯಾಕೆ ಅನಿಸುತ್ತಾ, ಮೂಲೆಯಲ್ಲಿ ಇನ್ನೂ ಪೂರ್ಣ ರೂಪ ತಾಳದೆ ಚೆಲ್ಲಾಪಿಲ್ಲಿಯಾಗಿರುವ ಕತೆಗಳನ್ನು ಅಸಹಾಯಕನಂತೆ ದಿಟ್ಟಿಸುತ್ತಾ, ಪೂರ್ಣಗೊಳ್ಳುವ ದಿನ ಎಂದಾದರೂ ಬರುವುದೋ ? ಎಂದು ನಿಟ್ಟುಸಿರು ಬಿಡುತ್ತೇನೆ.
ಆದರೆ, ಅನಾಮಿಕನಾಗಿ ತನ್ನ ಪಾಡಿಗೆ ತಾನು ಬರೆದು ಕೊಂಡಿರುವ ಸುಖ ಯಾವುದರಲ್ಲೂ ಇಲ್ಲವೆನಿಸುತ್ತಾ ಅನಾಮಿಕತೆಯಲ್ಲಿ ಬರೆಯುವ ಸುಖವನ್ನು ಧಾರಳವಾಗಿ ನಾನು ಅನುಭವಿಸಿದ್ದೇನೆ. ಅನುಭವಿಸುತ್ತಲೂ ಇದ್ದೇನೆ. ಇವೆಲ್ಲದರ ನಡುವೆ ಬರವಣಿಗೆಯಲ್ಲಿ ಸಾತತ್ಯ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲವೆಂಬುದು ಸದಾ ಕಾಡುತ್ತಿದೆ.
ಹಾಗೆಯೇ ನನ್ನ ಬರಹವನ್ನು ಓದಿ ನನ್ನನ್ನು ಮತ್ತಷ್ಟು ಬರೆಯುವ ಉತ್ಸಾಹ ತುಂಬಿದ ನನ್ನ ಬ್ಲಾಗ್ ಬರಹದ ಓದುಗಾರರಿಗೂ ಹಾಗೂ ನನ್ನ ಸಹ ಬ್ಲಾಗಿಗರಿಗೆ ಧನ್ಯವಾದಗಳು.
17
Sep
Posted by ನೀರ ತೆರೆ in 1, ಕವನ. 2 Comments
ಕೆಂಪು ಮೋಡಗಳು
ಸ್ತಬ್ದವಾಗಿ ಕಾಲು ಬುಡದಲ್ಲಿ ಬಿದ್ದಿದ್ದ
ಹಾದಿಯ ತುಂಭಾ ಹಾಹಾಕಾರವೆದ್ದಿದೆ.
ನಿತ್ಯ ಹೋಮದ ಹಾಗೆ ನಾನಾ ಪ್ರಕಾರದ
ಹೋಮಗಳಿಗೆ ಅಜ್ಯಗಳು ಯಥೇಚ್ಛವಾಗಿ ಸಿಗುತ್ತಿವೆ.
ಕಲಕಿದ ನಿಶ್ಯಬ್ದಕ್ಕಿತ್ತ ರಣ ಕಹಳೆಯ ಉದ್ದೀಪನೆಯ ಮಾತುಗಳು
ಫಲ ಕೊಡುವ ಅನ್ನದ ಬಟ್ಟಲನ್ನು ಕಸಿದು ಚೆಲ್ಲಾಡುತ್ತಿವೆ.
ಮೈ ಬೆವರಿನಲ್ಲೂ ಅಡರಿಕೊಂಡ ಈರ್ಷ್ಯೆ ಒಸರಿಕೊಂಡಾಗ
ಸಂಧಿ ಕಾದು ಸಿಕ್ಕಿದವರನ್ನು ಕಾದು ಇರಿಯುತ್ತಲಿದೆ.
ಎಲ್ಲಿಯೆಂದು ತಿಳಿಯದ ಹಾಗೆ ವಿಷದ ಬೆಂಕಿ ಬಿದ್ದಿದೆ
ತಾಯಂದಿರ ಶಾಪಗಳು ಮುಗಿಲು ಮುಟ್ಟುತ್ತಿದೆ.
ನೀಲಿ ಮೋಡಗಳ ಸಾಲಿನಲ್ಲಿ
ಕೆಂಪು ಮೋಡಗಳು ವಿರಾಜಮಾನವಾಗಿವೆ.
********
ಪ್ರೀತಿಯ ಕುಸುಮಗಳು
ಅವಳ ಕಣ್ಣುಗಳಲ್ಲಿ
ದಿನದಿಂದ ದಿನಕ್ಕೆ
ಪ್ರೀತಿಯ ಕುಸುಮಗಳು
ದಟ್ಟವಾಗಿ ಅರಳುತ್ತಿವೆ.
ಅವನ ಸ್ವಪ್ನದಂತಹ ದಿನಗಳು
ಸಾಕಾರಗೊಳ್ಳುತ್ತಿದೆ ಅವಳೆದೆಯ ಕನಸಿನಲ್ಲಿ
ಅವನು ಈ ಮಳೆಯ ನಡುವೆಯೂ
ತಂತಿಯೊಂದನ್ನು ಹಿತವಾಗಿ ಮೀಟುತ್ತಿದ್ದಾನೆ.
ಅಲ್ಲಿ ಅವನ ರಾಗಕ್ಕೆ
ಕಾಲಮಾನವೇ ತಿಳಿಯದಾಗಿದೆ.
ಈಗಲಾದರೂ ನನ್ನ ನೆಲದಲ್ಲಿ
ಶಾಂತಿ ಸ್ಥಿರಗೊಳ್ಳಬಹುದು.
*******
ನನ್ನೊಳಗಿನ ಅರಾಜಕತೆಯಿಂದ ಸ್ವಲ್ಪ ದಿನ ಬರೆಯಲು ಸಾಧ್ಯವಾಗಲಿಲ್ಲ. ಎಲ್ಲೆಲ್ಲಿಗೋ ಪಯಣದಲ್ಲಿದ್ದ ನನ್ನ ದಿನಚರಿಯ ಒತ್ತಡವು ಕೂಡಾ ಒಂದು ರೀತಿ ಕಾರಣ ಅಂತಾ ಅನಿಸಿದ್ದಿದೆ. ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ ನನ್ನ ಎರಡು ಕವನಗಳೊಂದಿಗೆ..
ಈ ಮಾತ ನುಡಿದವರು